Monday, June 26, 2017

ಜಲಾವೃತ ಕಲ್ಲಿದ್ದಲು ಗಣಿಯಲ್ಲೊಂದು ಪವಾಡ ಭಾಗ -1

   
             ಮಾರ್ಕ್ ಪೋಪೆರ್ನಾಕ್ ಮತ್ತು ಅವರ ಎಂಟು ಮಂದಿ ಸಹೊದ್ಯೋಗಿಗಳಿಗೆ ಬದುಕುವ ಯಾವ ಆಶಾಭಾವನೆಯು ಉಳಿದಿರಲಿಲ್ಲ. ತಮ್ಮ ಬದುಕಿನ ಕಟ್ಟಕಡೆಯ ಕ್ಷಣಗಳನ್ನು ಹೀಗೆ ಧಾರುಣವಾಗಿ ಕಳೆಯಬೇಕಾಯಿತಲ್ಲ ಎಂಬ ದುಃಖವುಂಟಾಗಿತ್ತು. ಮುಂದೆ ತಮ್ಮನ್ನು ಕಳೆದುಕೊಳ್ಳಲಿರುವ ಪತ್ನಿ-ಮಕ್ಕಳಿಗೆ, ಕುಟುಂಬಸ್ಥರಿಗೆ ತಮ್ಮ ಕೊನೆಯ ಸಂದೇಶವನ್ನು ಚೀಟಿಯಲ್ಲಿ ಬರೆದು ಬುಟ್ಟಿಯೊಂದರಲ್ಲಿ ಇಟ್ಟರು. ಗಾಳಿಯಿಲ್ಲದೆ ಉಸಿರಾಡುವುದೇ ಕಷ್ಟವಾಗುತ್ತಿತ್ತು, ದೇಹಸೋತು ಪ್ರಜ್ಞೆ ತಪ್ಪುವಂತೆ ಆಗುತ್ತಿತ್ತು. ಅಕಸ್ಮಾತ್ ತಾವು ಸತ್ತು ಹೋದರೆ ತಮ್ಮ ಶವ ಕಾಣೆಯಾಗಬಾರದೆಂದು, ಒಬ್ಬರನ್ನೊಬ್ಬರು ಹಗ್ಗದಿಂದ ಬಿಗಿದುಕೊಂಡರು. ಹೀಗೆ ಕಲ್ಲಿದ್ದಲು ಗಣಿಯೊಳಗೆ ಅವರನ್ನು  ಚಡಪಡಿಸುವಂತೆ ಮಾಡಿತ್ತು, ಜೀವಜಲ ನೀರು.

ಕಲ್ಲಿದ್ದಲು ಗಣಿಯ  ನಕ್ಷೆ. 


ಸ್ಥಳ ಅಮೇರಿಕಾ ಸಂಯುಕ್ತ ಸಂಸ್ಥಾನ, ಪೆನ್ಸಿಲ್ವೇನಿಯಾ ರಾಜ್ಯದ ಸೊಮರ್ಸೆಟ್ ಕೌಂಟಿಯ ಲಿಂಕನ್ ಟೌನ್ ಶಿಪ್. ಅದು ಎರಡು ವರ್ಷದಿಂದ ಸಕ್ರಿಯವಾಗಿರುವ ಬ್ಲಾಕ್ ವೂಲ್ಫ್ ಕಲ್ಲಿದ್ದಲು ಕಂಪನಿಯ ಕ್ಯೂಕ್ರೀಕ್ ಕಲ್ಲಿದ್ದಲು ಗಣಿ. ಅಂದು ಜುಲೈ 24, 2002ರ ಎಂದಿನಂತೆ ಎರಡನೇ ಶಿಫ್ಟ್ ಗೆ 18 ಮಂದಿ ಗಣಿಕಾರ್ಮಿಕರ ತಂಡ ಆಗಮಿಸಿತು. ಎಂದಿನ ಹಾಗೆ ಮ್ಯಾನ್ ಟ್ರಿಪ್ ವಾಹನದಲ್ಲಿ ತಲಾ 9 ಮಂದಿಯಂತೆ ಎರಡು ತಂಡವಾಗಿ ಗಣಿಯೊಳಗೆ ಕೆಲಸಕ್ಕೆ ಹೋದರು. 2.50 km ಉದ್ದಕ್ಕೆ ಚಾಚಿಕೊಂಡಿದ್ದ ಈ ಗಣಿ ಸಮೀಪವೇ 40 ವರ್ಷದಿಂದ ನಿಷ್ಕ್ರಿಯವಾಗಿದ್ದ ಸಾಕ್ಸ್ ಮ್ಯಾನ್ ಕಲ್ಲಿದ್ದಲು ಗಣಿಯಿತ್ತು. ಗಣಿ ಪ್ರವೇಶ ದ್ವಾರದಿಂದ 900 mtr ದೂರಸಾಗಿದ ನಂತರ ಕವಲು ಒಡೆದ ದಾರಿಯಿತ್ತು. ರಾನ್ ಶೇಡ್ ಮತ್ತು ಎಂಟು  ಮಂದಿ ತಂಡ 500 mtr ದೂರದ ಕೆಳಭಾಗದತ್ತ ಹೋದರು. ಮಾರ್ಕ್ ಪೋಪೆರ್ನಾಕ್ ಮತ್ತು ತಂಡ 1st ಲೆಫ್ಟ್ ಎಂದು ಕರೆಯುವ ಪ್ರದೇಶದತ್ತ ಹೋದರು. ನಿಮಿಷಕ್ಕೆ 20 ಟನ್ ಸಾಮರ್ಥ್ಯದ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದಾಗ, ರಾತ್ರಿ 8.45 ರ ಹೊತ್ತಿಗೆ ಮೇಲಿನಿಂದ   ನೀರು ಜಿನುಗಲು ಶುರುವಾಯಿತು. ಬೆನ್ನಹಿಂದೆಯೇ ಪೋಪೆರ್ನಾಕ್ ತಂಡದ 20 mtr ಎದುರಿಗೆ ಕಂಡುಬಂದದ್ದು ಗಣಿಯೊಳಗೆ ನುಗ್ಗಿ ಬರುತ್ತಿದ್ದ ನೀರು. ಏನಾಗುತ್ತಿದೆ ಎಂದು ಅರಿವಾಗುವ ಮೊದಲೇ ಅವರೆಲ್ಲರೂ ಬದಿಯಲ್ಲಿದ್ದ ಕಟ್ಟೆಯತ್ತ ಹಾರಿದರು. 40 ವರ್ಷದಿಂದ ಸ್ಥಗಿತಗೊಂಡಿದ್ದ ಸಮೀಪದ ಸಾಕ್ಸ್ ಮ್ಯಾನ್ ಕಲ್ಲಿದ್ದಲು ಗಣಿಯಲ್ಲಿ ಬಿಲಿಯನ್ ಗಟ್ಟಲೆ ಲೀಟರ್ ನೀರು ಸಂಗ್ರಹವಾಗಿತ್ತು. ಕ್ಯೂಕ್ರೀಕ್ ಗಣಿಗೆ ಹೋಲಿಸಿದರೆ, ಸಾಕ್ಸ್ ಮ್ಯಾನ್ ಗಣಿಪ್ರದೇಶ ಎತ್ತರದಲ್ಲಿತ್ತು. ಆದರೆ ಅಲ್ಲಿಂದ ಹೀಗೆ ಅಣೆಕಟ್ಟಿನಿಂದ ಚಿಮ್ಮಿದಂತೆ ಅಪಾರ ಪ್ರಮಾಣದ ನೀರಿನ ಪ್ರವಾಹ ಬರಬಹುದೆಂದು ಯಾರು ಯೋಚಿಸಿರಲಿಲ್ಲ. ಏಕೆಂದರೆ ಅವರಿಗೆ ನೀಡಿದ ನಕ್ಷೆ ಪ್ರಕಾರ ಸಾಕ್ಸ್ ಮ್ಯಾನ್ ಗಣಿ, ಕೆಲಸದ ಸ್ಥಳದಿಂದ 91 mtr ದೂರದಲ್ಲಿತ್ತು. ಆದರೆ ಇಂಜಿನೀಯರ್ ಗಳು ಮಾಡಿದ ತಪ್ಪಾದ ನಕ್ಷೆಯಿಂದಾಗಿ, ಹದಿನೆಂಟು ಜೀವಗಳು ಅಪಾಯಕ್ಕೆ ಸಿಲುಕಿದ್ದವು.

ಸಮುದ್ರ ಮಟ್ಟದಿಂದ 1800 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದ ಗಣಿಯೊಳಗೆ ನುಗ್ಗಿದ ನೀರು ಕೆಳಭಾಗದತ್ತ ಪ್ರವಹಿಸತೊಡಗಿತು. ಈ ಘಟನೆ ಗಣಿಯ ಅತ್ಯಂತ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾನ್ ಶೇಡ್ ಮತ್ತು ತಂಡಕ್ಕೆ ಗೊತ್ತಿರಲಿಲ್ಲ. ಕೂಡಲೇ 1st ಲೆಫ್ಟ್ ತಂಡ ಫೋನ್ ಮೂಲಕ ಅವರಿಗೆ ವಿಷಯ ತಿಳಿಸಿತ್ತು. ಅವರು ವಾಹನದಲ್ಲಿ ಪ್ರವೇಶ ದ್ವಾರದತ್ತ ಹಿಂತಿರುಗಿ ಹೊರಟರು. ಆದರೆ ಕವಲೊಡೆದ ಭಾಗದಲ್ಲಿ ಅದಾಗಲೇ ನೀರು ಬರಹತ್ತಿತ್ತು. ಜೀವಂತ ಜಲಸಮಾಧಿಯಾಗಲು ಹೆಚ್ಚು ಸಮಯ ಉಳಿದಿರಲಿಲ್ಲ. ತತ್ ಕ್ಷಣ ಅವರು ಗಣಿಯೊಳಗೆ ಗಾಳಿ ಸರಬರಾಜು ಮಾಡುತ್ತಿದ್ದ ವೆಂಟಿಲೇಟರ್ ಮುಖಾಂತರ ಹೊರಹೋಗಲು ಹವಣಿಸಿದರು. ಟಾರ್ಚ್ ಲೈಟ್ ಬೆಳಕಿನಲ್ಲೇ ಹಲವಾರು ಮೀಟರ್ಗಳ ದೂರದಷ್ಟು ವೆಂಟಿಲೇಟರ್ ಮುಖಾಂತರ ಸಾಗಿ ಕೊನೆಗೆ 9.45 ರ ಹೊತ್ತಿಗೆ ಹೊರಹೋಗುವ ದಾರಿ ಕಂಡುಕೊಂಡರು. ಇತ್ತಕಡೆ 1st ಲೆಫ್ಟ್ ನಲ್ಲಿ ಸಮಯ ಕಳೆದಂತೆ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಹಠಾತ್ ಆಗಿ ಬಂದ ನೀರನ್ನು ಕಂಡು ಒಂದು ಬದಿಗೆ ಹಾರಿ ಜೀವ ಉಳಿಸಿಕೊಂಡಿದ್ದ ಪೋಪೆರ್ನಾಕ್ ತಮ್ಮ ತಂಡದಿಂದ ಬೇರ್ಪಟ್ಟಿದ್ದರು. ನೀರಿನ ಹರಿವಿನ ರಭಸಕ್ಕೆ ಹಾಗು ಕತ್ತಲೆಗೆ ಅವರಿಗೆ ತಮ್ಮ ತಂಡದ ಸದಸ್ಯರಾರು ಕಾಣಿಸಲಿಲ್ಲ. ಏಕಾಂಗಿಯಾಗಿ ಉಳಿದುಕೊಂಡಿದ್ದ ಅವರಿಗೆ ಸ್ವಲ್ಪ ಹೊತ್ತಿನಲ್ಲಿ ಆಶಾಕಿರಣ ಗೋಚರಿಸಿತು. ಗಣಿ ಅಗೆಯುವ ಯಂತ್ರವೊಂದನ್ನು ತೆಗೆದುಕೊಂಡು ಸಹಾಯಕ್ಕಾಗಿ ಉಳಿದವರು ಅವರೆಡೆಗೆ ಧಾವಿಸಿದ್ದರು. ಅಗಲವಾಗಿ ಹರಿಯುತ್ತಿದ್ದ ನೀರಿನ ಆಚೆ ಬದಿಗೆ ಅವರು ಹಾರಬೇಕಿತ್ತು. ಮನಸಲ್ಲೇ ದೂರವನ್ನು ಅಂದಾಜಿಸಿ ಹಾರಿದರು, ಅವರನ್ನು ಉಳಿದವರು ಎಳೆದುಕೊಂಡರು. ಇಲ್ಲಿಗೆ ಒಂದು ವಿಘ್ನ ಮುಗಿದಿತ್ತು, ಆದರೆ ಸಾವು ಬೆನ್ನ ಹಿಂದೆಯೇ ಇತ್ತು.


ಗಣಿಯೊಳಗೆ ಸಂಭವಿಸಿದ ಅವಘಡ ಗಣಿಯ ಸುರಕ್ಷಾ ವಿಭಾಗಕ್ಕೆ ಗೊತ್ತಾಯಿತು. ಅವರು ತಕ್ಷಣ ಸಮೀಪದ ಸುರಕ್ಷಾದಳಕ್ಕೆ ವಿಷಯ ತಿಳಿಸಿದರು. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಗಣಿ ಕಾರ್ಮಿಕರ ಕುಟುಂಬಗಳಿಗೆ ವಿಷಯ ತಿಳಿದು ಅವರು ಸ್ಥಳಕ್ಕೆ ಧಾವಿಸಿದ್ದರು. ಗಣಿಯ ಪ್ರವೇಶದ್ವಾರದ ತನಕ ತಲುಪಿದ್ದ ನೀರನ್ನು ಪಂಪ್ ಮೂಲಕ ಎತ್ತಿ ಹೊರಬಿಡಲಾರಂಭಿಸಿದರು. ರಕ್ಷಣಾ ತಂಡಕ್ಕೆ ಒಳಗೆ ಸಿಲುಕಿದ ಗಣಿ ಕಾರ್ಮಿಕರ ಸ್ಥಿತಿ ಏನಾಗಿದೆ? ಎನ್ನುವುದರ ಬಗ್ಗೆ ಸುಳಿವಿರಲಿಲ್ಲ, ಮತ್ತು ಸಂಪರ್ಕಿಸಲು ಯಾವುದೇ ಮಾರ್ಗವು ಇರಲಿಲ್ಲ. ಗಣಿ ಎಂಜಿನಿಯೆರ್ ಗಳು, ಜಿ.ಪಿ.ಎಸ್ ಹಾಗು ನಕ್ಷೆಗಳನ್ನು ಬಳಸಿಕೊಂಡು ಒಂದು ಸ್ಥಳವನ್ನು ಗುರುತು ಮಾಡಿದರು, ಇಲ್ಲಿಂದ 75 ಮೀಟರ್ ಕೆಳಭಾಗಕ್ಕೆ ಕೊರೆಯಬೇಕಿತ್ತು. ಅಕಸ್ಮಾತ್ ಗಣಿ ಕಾರ್ಮಿಕರೇನಾದರೂ ಬದುಕಿದ್ದರೆ, ಅವರು ಗಣಿಯೊಳಗೆ ಇದ್ದ ಅತಿ ಎತ್ತರದ ಈ ಜಾಗದಲ್ಲಿ ಸಿಲುಕಿರಬಹುದೆಂದು ಊಹಿಸಿದರು. ಅದು ಕೇವಲ ಊಹೆ ಅಷ್ಟೇ , ಏಕೆಂದರೆ ಸರೋವರದಂತಿದ್ದ ಪ್ರದೇಶದಿಂದ ನುಗ್ಗಿದ ನೀರಿನಲ್ಲಿ, ಈ ಕಾರ್ಮಿಕರು ಜೀವಸಹಿತ ಉಳಿದಿರುವುದು ಖಚಿತವಾಗಿರಲಿಲ್ಲ. ರಾತ್ರಿ ಎರಡು ಗಂಟೆ ಹೊತ್ತಿಗೆ 15 ಸೆಂಟಿಮೀಟರ್ ಅಗಲದ ಬಾವಿಯನ್ನು ಬೋರವೆಲ್ ಯಂತ್ರ ಕೊರೆಯಲಾರಂಭಿಸಿತು. ಕೇವಲ 6 mtr ಅಗಲವಿದ್ದ ಸುರಂಗದ ಸಮಾನಾಂತರವಾಗಿ ಮೇಲೆ ಹಾಕಿದ ಗುರುತಿನ ಸ್ಥಳ ತಪ್ಪಾಗಿದ್ದರೆ, ಇಡೀ ಪರಿಶ್ರಮ ವ್ಯರ್ಥವಾಗುತಿತ್ತು.


ಸುರಂಗದ ಮಾದರಿ ಚಿತ್ರ 



     ಬೋರೆವೆಲ್ ಗಳಿಗೆ ಬಿದ್ದು 40-50 ಅಡಿಗಳಲ್ಲಿ ಸಿಲುಕಿ, ಹೊರಬರಲಾಗದೆ ಸಾವನ್ನಪ್ಪಿದ್ದ ಅನೇಕ ಪುಟಾಣಿ ಮಕ್ಕಳ ಕಥೆಯನ್ನು ನೀವುಗಳು ಓದಿರುತ್ತೀರಿ. ಅಂತಹದರಲ್ಲಿ ಇಲ್ಲಿ 250 ಅಡಿಗಿಂತ ಹೆಚ್ಚಿನ ಆಳದಲ್ಲಿ, ಯಾವುದೋ ಗೊತ್ತಿರದ ಸ್ಥಳವೊಂದರಲ್ಲಿ ಸಿಲುಕಿದ್ದ ಕಾರ್ಮಿಕರು ಹೊರಬರಬೇಕಾದರೆ ಪವಾಡವೊಂದು ಜರುಗಬೇಕಿತ್ತು. ಹಲವು ತಾಸುಗಳಿಂದ ಒಳಗೆ ಸಿಲುಕಿರುವ ಕಾರ್ಮಿಕರಿಗೆ ಆಮ್ಲಜನಕದ ಕೊರತೆಯಿಂದ ಉಸಿರುಕಟ್ಟಿ ಕಣ್ಣುಕತ್ತಲೆ ಆಗುತಿತ್ತು. ಅಷ್ಟರಲ್ಲಿ ಮೇಲಿನಿಂದ ಏನೋ ಸದ್ದು ಕೇಳಿಸಲಾರಂಭಿಸಿತು. ಬರುಬರುತ್ತ ಶಬ್ದ ಜೋರಾದಂತೆ, ನಮ್ಮ ರಕ್ಷಣೆಗೆ ಪ್ರಯತ್ನ ನಡೆಯುತ್ತಿದೆ, ಎಂದು ಖಚಿತವಾಯಿತು. ಮುಂಜಾನೆ ಐದು ಗಂಟೆ ಹೊತ್ತಿಗೆ, 75 ಮೀಟರ್ ಕೆಳಕ್ಕೆ ಬಾವಿ ಕೊರೆದ ನಂತರ ಯಂತ್ರಕ್ಕೆ ಏನೋ? ತಾಕಿದಂತಾಗಿ ಶಬ್ದ ಬರುತಿತ್ತು. ಮೇಲೆ ಎಲ್ಲ ಯಂತ್ರವನ್ನು ನಿಲ್ಲಿಸಿ ಕಿವಿಗೊಟ್ಟು ಕೇಳಿದರು. ಅವರ ಖುಷಿಗೆ ಪಾರವೇ ಇರಲಿಲ್ಲ. ಕೆಳಗೆ ಸಿಲುಕಿದವರು 'ನಾವಿನ್ನು ಬದುಕಿದ್ದೇವೆ ' ಎಂದು ಸೂಚಿಸಲು ಯಂತ್ರದ ಕೆಳಭಾಗಕ್ಕೆಬಡಿಯುತ್ತಿದ್ದರು. ಬೋರವೆಲ್ ಯಂತ್ರದ ಕಂಪ್ರೆಸರ್ ನ ಗಾಳಿ ಅವರಿಗೆ ದೊರಕಿ ಉಸಿರಾಟ ಸರಾಗವಾಯಿತು. ಬದುಕಿ ಬರುವ ಆಶಾಭಾವನೆ ಮೂಡಿತು.

ಆದರೆ ಈ ಖುಷಿ  ತಾತ್ಕಾಲಿಕವಾಗಿತ್ತು, ಏಕೆಂದರೆ?.......................
                                                                                                              (ಮುಂದುವರೆಯುವುದು)

                                                                                                                -Tharanatha Sona



ಮಾಹಿತಿ ಮತ್ತು ಚಿತ್ರಗಳು : ಅಂತರ್ಜಾಲ ಮತ್ತು ಜಿಯೋಗ್ರಾಫಿಕ್ ಚಾನೆಲ್

www.sampada.net ನಲ್ಲಿ ಪ್ರಕಟವಾದ ಲೇಖನ. 

Tuesday, June 13, 2017

ಆಫ್ರಿಕಾದ ಕಾಡಿನಲ್ಲೊಂದು ಸರ್ಜಿಕಲ್ ಸ್ಟ್ರೈಕ್ ಭಾಗ-2

ಕಾರ್ಯಾಚರಣೆ ನಡೆದ ಸ್ಥಳದ ಚಿತ್ರಣ 

ಸಾಸ್ ಅರಣ್ಯದಲ್ಲಿ  ಇಷ್ಟೆಲ್ಲ ಬೆಳವಣಿಗೆಗಳು ಆಗುತ್ತಿರುವಾಗ ಇತ್ತ ಕಡೆ ಬ್ರಿಟಿಷ್ ಸೇನೆಯಲ್ಲಿ ಸದ್ದಿಲ್ಲದಂತೆ ರೂಪುರೇಷೆಯೊಂದು ತಯಾರಾಗಿತ್ತು. ಅಪಹೃತರನ್ನು ರಕ್ಷಿಸಲು ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ರಹಸ್ಯ ಕಾರ್ಯಾಚರಣೆ ಒಂದಕ್ಕೆ ಅನುಮತಿ ಕೊಟ್ಟರು.  ಅದುವೇ ಆಪರೇಷನ್ ಬರ್ರಾಸ್.  ಇಂತಹ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಗೆಂದು ಸಿದ್ದವಾಗಿದ್ದ ಸಾಸ್ (SAS- Special Air service) ತನ್ನ ಪರಿವೀಕ್ಷಣಾ ತಂಡವೊಂದನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ವೆಸ್ಟ್ ಸೈಡ್ ಬಾಯ್ಸ್ಗಳ ತಾಣದತ್ತ ಕಳುಹಿಸಿತು. ಅಪಹೃತರನ್ನು ಕೂಡಿ ಹಾಕಿದ್ದ ಪ್ರದೇಶದ ಸ್ವಲ್ಪ ದೂರದಲ್ಲಿ ಕಾಡಿನ ಮರೆಯಲ್ಲಿ ಅಡಗಿಕೊಂಡ ಇವರು ಸೂಕ್ಷ್ಮ ಮೈಕ್ರೋಫೋನ್ ಮೂಲಕ ಅಲ್ಲಿಂದ ಕೇಳಿ ಬರುವ ಮಾತುಕತೆಗಳನ್ನು ಆಲಿಸಲಾರಂಭಿಸಿದರು. ಬೇಡಿಕೆಗಳ ಈಡೇರಿಕೆ ತಡವಾದಂತೆ ಉಗ್ರರು ಸೇರಿಹಿಡಿದ ಯೋಧರನ್ನು ಹಿಂಸಿಸಲಾರಂಭಿಸಿದರು. ಗುಂಡಿಯೊಳಗೆ ಜೀವಂತ ಶವವಾಗಿದ್ದ ಮುಸ ಬಂಗುರಾನ ಪರಿಸ್ಥಿತಿ ದಿನಕಳೆದಂತೆ ಬಿಗಡಾಯಿಸುತಿತ್ತು. ಗ್ಯಾಂಗ್ ಜತೆಗಿದ್ದ ಸಣ್ಣ ಸಣ್ಣ ಬಾಲಕರು ಕೂಡ ಅವನಿಗೆ ಕಲ್ಲು ಹೊಡೆಯುತ್ತಿದ್ದರು. ಮೇಜರ್ ಅಲನ್ ಮಾರ್ಷಲ್ರನ್ನು ಅಂತಾರಾಷ್ಟ್ರೀಯ ಮಾಧ್ಯಮದ ಜೊತೆಗೆ ಫೋನ್ನಲ್ಲಿ ಮಾತಾಡುವಂತೆ ಒತ್ತಾಯಿಸಲಾಗುತ್ತಿತ್ತು, ಒಪ್ಪದಿದ್ದಾಗ ಕೊಲ್ಲುವುದಾಗಿ ಹೆದರಿಸುತಿದ್ದರು. ಇದನ್ನು ಪರಿವೀಕ್ಷಣಾ ತಂಡ ಮುಖ್ಯನೆಲೆಗೆ ವರದಿ ಮಾಡುತ್ತಿತ್ತು.


ಸಿಯಾರ್ ಲಿಯೋನ್ನ ಮುಖ್ಯ ನದಿಯಾದ ರೊಕೆಲ್ ಕ್ರೀಕ್ ನ ಉತ್ತರ ಭಾಗದಲ್ಲಿ ಒತ್ತೆಯಾಳುಗಳನ್ನು ಕೂಡಿ ಹಾಕಿದ ಗಬೇರಿ ಬಾನ ಇದ್ದರೆ, ನದಿಯ ದಕ್ಷಿಣ ಭಾಗದ ಮ್ಯಾಗ್ಬೇನಿಯಲ್ಲಿ  ಅವರದ್ದೆ ಇನ್ನೊಂದು ತಾಣವಿತ್ತು. ಸಾಸ್ ತಂಡ  ಕೇವಲ ಗಬೇರಿ ಬಾನಕ್ಕೆ ಧಾಳಿ ನಡೆಸಿದರೆ ಅಲ್ಲಿಂದ ಸುಮಾರು 2 km ದೂರದ ಮ್ಯಾಗ್ಬೇನಿಯಲ್ಲಿದ್ದ ಉಗ್ರರ ಪ್ರತಿರೋಧ ಎದುರಿಸಬೇಕಿತ್ತು. ಹಾಗಾಗಿ ಏಕಕಾಲದಲ್ಲಿ ನದಿಯ ಎರಡು ಬದಿ ಧಾಳಿ ಮಾಡಬೇಕಿತ್ತು. ಈ ಸಂಯುಕ್ತ ಧಾಳಿಗೆ ಬ್ರಿಟಿಷ್ ಪ್ಯಾರಾಚೂಟ್ ರೆಜಿಮೆಂಟ್ನ 130 ಯೋಧರನ್ನು ಬಳಸಿಕೊಳ್ಳಲು ನಿರ್ಧರಿಸಿದರು. ದಟ್ಟವಾದ ಅರಣ್ಯ, ಅಪಾಯಕಾರಿ ರಸ್ತೆಮಾರ್ಗ ಮತ್ತು ಹರಿಯುವ ನದಿಯಿಂದಾಗಿ ವಾಯುಮಾರ್ಗದಲ್ಲಿ ಧಾಳಿ ಮಾಡಲು ಯೋಜಿಸಲಾಯಿತು. ಶತ್ರುಗಳು ಹೊಂದಿರುವ ಆಯುಧಗಳು, ಚಲನವಲನ ಹಾಗು ಹೆಲಿಕ್ಯಾಪ್ಟರ್ ಇಳಿಯಲು ಸೂಕ್ತ ಜಾಗ ಮೊದಲಾದ ಮಾಹಿತಿಯನ್ನು ಸಾಸ್ ನ   ಪರಿವೀಕ್ಷಣಾ ತಂಡ ಒದಗಿಸಿತು. ಒಂದು ರಹಸ್ಯ ತಾಣದಲ್ಲಿ ಕಾರ್ಯಾಚರಣೆಯ ರಿಹರ್ಸಲ್ ಕೂಡ ನಡೆಸಿದ್ದರು, ಏಕೆಂದರೆ 12 ಮಂದಿ ಸೇನೆಯ ಒತ್ತೆಯಾಳುಗಳು ಹಾಗು ಹೀಗೆಯೇ ಬಂಧಿತರಾಗಿದ್ದ ಕೆಲವು ಸಿಯರ್ ಲಿಯೋನ್ ನಾಗರಿಕರ ಪ್ರಾಣಕ್ಕೆ ಕುತ್ತು ಉಂಟಾಗಬಾರದಿತ್ತು.

 ಅಂತೆಯೇ ಸೆಪ್ಟೆಂಬರ್ 10ರಂದು ಸಂಜೆ 6 ಗಂಟೆಗೆ, ಮೂರು ಚೀನೂಕ್  ಹೆಲಿಕಾಪ್ಟರ್ನಲ್ಲಿ ಎರಡು ತಂಡ ಹೊರಟಿತ್ತು. ಸಾಸ್ ನ ತಂಡ ಗಬೇರಿ ಬಾನದತ್ತ ಹೊರಟರೆ ಮತ್ತೊಂದು ಹೆಲಿಕಾಪ್ಟರನಲ್ಲಿ  ಪ್ಯಾರಾಚೂಟ್ ರೆಜಿಮೆಂಟ್ ಮ್ಯಾಗ್ಬೇನಿಗೆ ಹೋಯಿತು. ನಾಯಕ ಪೋಡೇ ಕಲ್ಲೆ ಸೇರಿದಂತೆ ಅತಿಯಾದ ಅಮಲು ಪದಾರ್ಥ ಸೇವಿಸಿದ  ಉಗ್ರರು ನಿದ್ದೆಯಲ್ಲಿದ್ದರು. ಹಠಾತ್ತಾಗಿ ಹೆಲಿಕ್ಯಾಪ್ಟರ್ ಸದ್ದು  ಕೇಳಿ ಏನೋ ಮಸಲತ್ತಿನ ಶಂಕೆ ಮೂಡಿ, ಒತ್ತೆಯಾಳುಗಳನ್ನು ಕೊಲ್ಲಲು  ಧಾವಿಸಿದರು , ಈ ಹಂತದಲ್ಲಿ ಹೆಲಿಕ್ಯಾಪ್ಟರ್ನಲ್ಲಿದ್ದ ವಿಶೇಷ ತಂಡ ನೆಲಕ್ಕಿಳಿಯದೆ ಏನು ಮಾಡುವಂತಿರಲಿಲ್ಲ. ಆದರೆ ಉಗ್ರರ ಅರಿವಿಗೂ ಬಾರದ ವಿಚಾರವೊಂದಿತ್ತು. ಕಳೆದ ಒಂದು ವಾರದಿಂದ ನೆಲದಲ್ಲಿ ಅಡಗಿ ಕುಳಿತಿದ್ದ ಸಾಸ್ ನ ಪರಿವೀಕ್ಷಣಾ ತಂಡ, ಒತ್ತೆಯಾಳುಗಳನ್ನು ಇಟ್ಟಿದ್ದ ಕಟ್ಟಡದ 50 mtr ಸಮೀಪಕ್ಕೆ ಹೋಗಿತ್ತು. ಕೊಲ್ಲಲು ಓಡಿಬಂದ ಉಗ್ರರು ಗುಂಡೇಟಿಗೆ ಬಲಿಯಾದರು. ಹೆಲಿಕಾಪ್ಟರ್ನಲ್ಲಿದ್ದ  ತಂಡ ಹಗ್ಗದ ಸಹಾಯದಿಂದ ನೆಲಕ್ಕೆ ಇಳಿಯಿತು. ಹೀಗೆ ಇಳಿಯುತ್ತಿರುವಾಗಲೇ ಬ್ರಾಡ್ ಟಿನಿಯನ್ ಫ್ಲ್ಯಾಂಕ್ ಎನ್ನುವ ಯುವ ಯೋಧನಿಗೆ ಗುಂಟೇಟು ತಗುಲಿತು, ಗಾಯಾಳುವನ್ನು ತಕ್ಷಣವೇ ಮತ್ತೆ ಹೆಲಿಕ್ಯಾಪ್ಟರ್ಗೆ ಹತ್ತಿಸಿದರು. ಉಳಿದವರು ಇಳಿದು ಹೋಗಿ ಉಗ್ರರನ್ನು ಸಂಹರಿಸಹತ್ತಿದ್ದರು. ಗುಂಡಿಯ ಕೊಳಕಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಮುಸ ಬಂಗುರಾರನ್ನು ಸೇರಿದಂತೆ ಎಲ್ಲಾ ಒತ್ತೆಯಾಳುಗಳನ್ನು ಹೆಲಿಕಾಪ್ಟರ್ಗೆ ಸುರಕ್ಷಿತವಾಗಿ ಹತ್ತಿಸಲಾಯಿತು. ಸ್ವಯಂಘೋಷಿತ ಬ್ರಿಗೇಡಿಯರ್ ಪೋಡೇ ಕಲ್ಲೆ ತನ್ನ ಬೆಡ್ ಕೆಳಗೆ ಅವಿತುಕೊಂಡಿದ್ದ, ಅವನನ್ನು ಬಂಧಿಸಲಾಯಿತು. ದಿಢೀರ್ ದಾಳಿಯಿಂದ ಬೆಚ್ಚಿದ ಉಗ್ರರು ಸಾವರಿಸಿಕೊಂಡು ಪ್ರತಿಧಾಳಿ ಆರಂಭಿಸಿದ್ದರು. ಆದರೆ ತುಂಬಾ ಹೊತ್ತು ಅವರ ಆಟ ನಡೆಯಲಿಲ್ಲ. 30 ನಿಮಿಷದೊಳಗೆ ಗಾಯಾಳು ಮತ್ತು ರಕ್ಷಿಸಲ್ಪಟ್ಟ ಗಸ್ತುತಂಡದ ಯೋಧರನ್ನು ಹೊತ್ತ ಹೆಲಿಕ್ಯಾಪ್ಟರ್ ಮರು ಪ್ರಯಾಣ ಬೆಳೆಸಿತ್ತು.

ಧಾಳಿಯಲ್ಲಿ ನಾಶವಾದ ಕಟ್ಟಡ 

ಇತ್ತ ಕಡೆ ಮ್ಯಾಗ್ಬೇನಿಯಲ್ಲಿ, 130 ಪ್ಯಾರಾಚೂಟ್ ರೆಜಿಮೆಂಟ್ ಯೋಧರನ್ನು ಹೊತ್ತ ಹೆಲಿಕ್ಯಾಪ್ಟರ್ ಕಾರ್ಯಾಚರಣೆ ಶುರುಮಾಡಿತು. ವಿಮಾನ ನಿರೋಧಕ ಕ್ಷಿಪಣಿ, A.K- 47 ಹಾಗು ಮಷೀನ್ ಗನ್  ಮೊದಲಾದ ಆಧುನಿಕ ಶಸ್ತ್ರ ಹೊಂದಿದ್ದ ಉಗ್ರರ ಒಂದು ಹೊಡೆತ ಬಿದ್ದರೂ ಹೆಲಿಕ್ಯಾಪ್ಟರ್ ನೆಲಕ್ಕೆ ಉರುಳುತ್ತಿತ್ತು.  ದುರದೃಷ್ಟವಶಾತ್ ಯೋಧರು ಹಗ್ಗದಿಂದ ಇಳಿಯುವ ಸ್ಥಳ ಕೆಸರಿನಿಂದ ಕೂಡಿದ ನೆಲವಾಗಿತ್ತು. ಹೇಗೋ ಇಳಿದ ಯೋಧರ ಸೆಕೆಂಡ್ ಇನ್ ಕಮಾಂಡ್ ಡನ್ನಿ ಮ್ಯಾಥ್ಯೂ ಗೆ ಗುಂಡು ತಗುಲಿತ್ತು. ಗಾಬರಿಯಾಗದೆ ಯೋಧರು ಉಗ್ರರ ಬೇಟೆಗೆ ಇಳಿದರು. ಅಡಗಿಸಿಟ್ಟಿದ್ದ ವಜ್ರಗಳನ್ನು ವಶಪಡಿಸಿಕೊಳ್ಳಲಾಯಿತು. ಉಗ್ರರಿಂದ ಗಸ್ತುಪಡೆಯ ವಾಹನಗಳನ್ನು ಮರುವಶಮಾಡಲಾಯಿತು, ಅವರ ಎಲ್ಲ ಸಂಪನ್ನೂಲಗಳನ್ನು ನಾಶ ಮಾಡಿದ ನಂತರ ಬದುಕುಳಿದ ಉಗ್ರರು ದಟ್ಟ ಕಾಡಿನತ್ತ ಪರಾರಿಯಾದರು.

ನದಿಯ ಎರಡು ಕಡೆ ಉಗ್ರರಿಗೆ ಅಪಾರ ಹಾನಿಯಾಗಿತ್ತು. ವೆಸ್ಟ್ ಸೈಡ್ ಬಾಯ್ ಗಳ 25 ಕ್ಕೂ ಹೆಚ್ಚು ಮೃತದೇಹಗಳು ಸಿಕ್ಕವು. ಇನ್ನು ಹಲವರ ಮೃತದೇಹಗಳು ನಂತರದ ದಿನಗಳಲ್ಲಿ ಕಾಡಿನಲ್ಲಿ ಪತ್ತೆಯಾಯ್ತು.  ಓಡಿ ಹೋಗಿದ್ದ ಉಗ್ರರು ಸೇನೆಗೆ ಶರಣಾದರು. ವಿಶೇಷ ಪಡೆಯ ಯೋಧ ಬ್ರಾಡ್ ಟಿನಿಯನ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಅತಿ ಬಲಿಷ್ಠ ಹಾಗು ಭೀಭತ್ಸ ವೆಸ್ಟ್ ಸೈಡ್ ಬಾಯ್ಸ್ ಗಳ ಸೋಲಿನ ಕತೆ ಕೇಳಿದ ಇನ್ನುಳಿದ ಬಂಡುಕೋರರಲ್ಲಿ ಭೀತಿಹುಟ್ಟಿ ಕೊನೆಗೆ ಅವರು ಶರಣಾದರು. ಕೆಲವೇ ತಿಂಗಳುಗಳಲ್ಲಿ ನಾಗರಿಕ ಯುದ್ಧ ಮುಗಿಯಿತು. ಸೆರೆ ಸಿಕ್ಕ ನಾಯಕ ಪೋಡೇ ಕಲ್ಲೆ ಸೇರಿದಂತೆ ಎಲ್ಲರಿಗೂ ಯುದ್ಧಾಪರಾಧಕ್ಕಾಗಿ ಶಿಕ್ಷೆಯಾಯಿತು. ಸಾಸ್ ನ ಸಾಹಸಕತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಯಿತು. ಅಂದು ಹಿಂಸಿಸಲ್ಪಟ್ಟು ಬದುಕುವ ಅಸೆ ಕಳೆದುಕೊಂಡಿದ್ದ ಮೂಸಾ ಬಂಗೂರ ಇಂದು ಸೇನೆಯಲ್ಲಿ ಮೇಜರ್ ಹುದ್ದೆಗೇರಿದ್ದಾರೆ. ಸಿಯರ್ ಲಿಯೋನ್ನಲ್ಲಿ ಇಂದಿಗೂ ಬಡತನವಿದೆ. ಆದರೆ ಶಾಂತಿ ನೆಲೆಸಿದೆ.


 ಆಫ್ರಿಕಾದ ಕಾಡಿನಲ್ಲೊಂದು ಸರ್ಜಿಕಲ್ ಸ್ಟ್ರೈಕ್ ಭಾಗ-1


                                                                                                               -Tharanatha Sona

www.nilume.net ನಲ್ಲಿ ಪ್ರಕಟವಾಗಿದ್ದ ಲೇಖನ 

Saturday, June 10, 2017

ಆಫ್ರಿಕಾದ ಕಾಡಿನಲ್ಲೊಂದು ಸರ್ಜಿಕಲ್ ಸ್ಟ್ರೈಕ್ ಭಾಗ-1


       ಸಿಯಾರ್ ಲಿಯೋನ್ ಸೇನೆಯ ಸೈನಿಕ  ಮುಸ ಬಂಗುರಾ ಬಂಧಿಯಾಗಿದ್ದ  ಗುಂಡಿ ತುಂಬಾ ಆಳವೇನೂ ಇರಲಿಲ್ಲ , ಕೇವಲ 2 ಮೀಟರ್ ಅಷ್ಟೇ. ಆದರೆ ಸುತ್ತಲು ಹರಡಿದ್ದ ಮಾನವ ತ್ಯಾಜ್ಯ , ಕೆಸರು ನರಕದರ್ಶನ ಮಾಡಿಸುತಿತ್ತು . ಅದಲ್ಲದೆ ಹಲ್ಲೆಯಿಂದ ದೇಹದಲ್ಲಿ ಅದ ಗಾಯಗಳು ಅಪಾರ ಹಿಂಸೆ ಉಂಟುಮಾಡುತ್ತಿದ್ದವು. ಮದ್ಯ ಮತ್ತು ಮಾದಕ ಪದಾರ್ಥ ಸೇವಿಸಿ ಕ್ರೂರವಾಗಿ ದಂಡಿಸುತ್ತಿದ್ದ ನರ ರಾಕ್ಷಸರ ಕೈಯಿಂದ ಹೊರಬಂದು ಬದುಕುವ ಸಾಧ್ಯತೆಯೂ ಇರಲಿಲ್ಲ. 


ಪಶ್ಚಿಮ ಆಫ್ರಿಕಾದ ಸಿಯಾರ್ ಲಿಯೋನ್ 
ಅದು ಸಿಯಾರ್ ಲಿಯೋನ್ , ಪಶ್ಚಿಮ ಆಫ್ರಿಕಾದ ಪುಟ್ಟ ರಾಷ್ಟ್ರ. ವಿಸ್ತೀರ್ಣದಲ್ಲಿ ಕರ್ನಾಟಕದ ಅರ್ಧದಷ್ಟು ಇಲ್ಲದ (71,740 km^2 ) ಅತ್ಯಂತ ಕಡು ಬಡತನದಿಂದ ಕೂಡಿದ ರಾಷ್ಟ್ರ. ಇಂತಹ ರಾಷ್ಟ್ರದಲ್ಲಿ 1991ರಿಂದ ಆರಂಭವಾಗಿದ್ದ ನಾಗರಿಕ ಯುದ್ಧ 9 ವರ್ಷ ಆದರೂ ಮುಗಿದಿರಲಿಲ್ಲ, 75,000ಕ್ಕೂ ಹೆಚ್ಚು ಜನರ ಪ್ರಾಣಹರಣವಾಗಿತ್ತು.  ನಾಗರಿಕರ ರಕ್ಷಣೆಗಾಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಅಡಿಯಲ್ಲಿ ಭಾರತವು ಸೇರಿದಂತೆ ಅನೇಕ ದೇಶಗಳ ಸೇನೆಗಳು ಕಾರ್ಯನಿರ್ವಹಿಸುತ್ತಿದ್ದವು. ಹಿಂದೊಮ್ಮೆ ಬ್ರಿಟಿಷ್ ವಸಾಹತು ಆಗಿದ್ದ ದೇಶದ ರಕ್ಷಣೆಯ ಸಲುವಾಗಿ  ಬ್ರಿಟನ್ , ಸಿಯಾರ್ ಲಿಯೋನ್ ಸೇನೆಗೆ ತರಭೇತಿ ನೀಡುತ್ತಿತ್ತು .





ಅದು 25 ಆಗಸ್ಟ್ 2000ನೇ ಇಸವಿ,  ಮಧ್ಯಾಹ್ನದ  ವೇಳೆಯಲ್ಲಿ ಮೇಜರ್ ಅಲನ್ ಮಾರ್ಷಲ್ ನೇತೃತ್ವದಲ್ಲಿ 11 ಜನ ರಾಯಲ್ ಐರಿಶ್ ರೆಜಿಮೆಂಟ್ ನ ಮೊದಲನೇ ಬೆಟಾಲಿಯನ್ ಯೋಧರು ಹಾಗು  ಓರ್ವ (ಮುಸ ಬಂಗುರ) ಸಿಯಾರ್ ಲಿಯೋನ್ ಸರ್ಕಾರಿ ಸೇನೆಯ ಸೈನಿಕನನ್ನು ಕೂಡಿದ ಗಸ್ತುಪಡೆ ಸಂಚರಿಸುತ್ತಿತ್ತು. ರಾಜಧಾನಿ ಫ್ರೀಟೌನ್ ನಲ್ಲಿ ಮುಖ್ಯನೆಲೆ ಹೊಂದಿದ್ದ ಪಡೆ, ರೊಕೆಲ್ ಕ್ರೀಕ್ ನದಿದಂಡೆಯ ಸಾಸ್ ಅರಣ್ಯ ಪ್ರದೇಶದಲ್ಲಿ ಸಾಗುತ್ತಿದ್ದಾಗ ಸಮೀಪದಲ್ಲಿ ಬಂಡುಕೋರರ ತಾಣವಿರುವ ವರ್ತಮಾನ ಬಂತು. ಆಕ್ರ ಹಿಲ್ಸ್ ಪ್ರದೇಶದಲ್ಲಿದ್ದ ಮಾಗ್ಬೇನಿ ಮತ್ತು ಗಬೇರಿ ಬಾನದ ಹಳ್ಳಿಗಳು ವೆಸ್ಟ್ ಸೈಡ್ ಬಾಯ್ಸ್ ಎನ್ನುವ ನಟೋರಿಯಸ್ ಗ್ಯಾಂಗ್ನ ತಾಣವಾಗಿತ್ತು. 1991ರಲ್ಲಿ ರೆವೊಲ್ಯೂಷನರಿ ಯುನೈಟೆಡ್ ಫ್ರಂಟ್ (R.U.F ) ಎನ್ನುವ ಸಂಘಟನೆ ಸರ್ಕಾರದ ವಿರುದ್ಧ  ಹೋರಾಟ ಆರಂಭಿಸಿತು. ವೆಸ್ಟ್ ಸೈಡ್ ಬಾಯ್ಸ್ ಗಳು 1997ರ ವರೆಗೆ R.U.F ನ ಜೊತೆ ಸೇರಿ ಕೊನೆಗೆ ಹೋರಾಟದಲ್ಲಿ ಸೋತು ಈ ಕಾಡಿನಲ್ಲಿ ವಾಸವಾಗಿದ್ದರು. ಮಹಿಳೆಯರು ಮಕ್ಕಳನ್ನು ಸೇರಿದಂತೆ  400ಕ್ಕೂ ಹೆಚ್ಚು ಸದಸ್ಯರಿದ್ದ ಈ ತಂಡದ ನಾಯಕ 24ರ ಹರೆಯದ ಪೋಡೇ ಕಲ್ಲೆ, ಸಿಯಾರ್ ಲಿಯೋನ್ ಸೇನೆಯ ಮಾಜಿ ಸೈನಿಕ.  ಸದಾ ಮದ್ಯ,ಅಮಲು ಪದಾರ್ಥಗಳ ನಶೆಯಲ್ಲಿರುತ್ತಿದ್ದ ಇವರುಗಳ ಮುಖ್ಯ ಉದ್ದೇಶ ಅಲ್ಲಿನ ವಜ್ರದ ಗಣಿಗಳ ಮೇಲೆ ಹಿಡಿತ ಸಾಧಿಸುವುದು. ಹಾಗೆಯೇ ಸಿಕ್ಕಿದ ವಜ್ರಗಳನ್ನು ಅಲ್ ಕೈದಾಕ್ಕೆ ಮಾರಿ, ಶಸ್ತ್ರಾಸ್ತ್ರಗಳನ್ನು ಸಂಪಾದಿಸಿದರು.


ವಿಶ್ವಸಂಸ್ಥೆಯ ತಪಾಸಣಾ ಕೇಂದ್ರ ದಾಟಿ ಫ್ರೀಟೌನ್ ನಿಂದ ಸುಮಾರು 50 km ದೂರದಲ್ಲಿರುವ ಗಬೇರಿ ಬಾನದತ್ತ  ಮೂರು  ವಾಹನಗಳಲ್ಲಿ ಬ್ರಿಟಿಷ್ ಗಸ್ತು ಪಡೆ ಹೊರಟಿತ್ತು. ಸ್ವಲ್ಪ ಸಮಯದ ನಂತರ ದಟ್ಟ ಕಾಡಿನಲ್ಲಿ ಸಾಗುತ್ತಿದ್ದಾಗ ಎದುರಾಗಿತ್ತು, ಕಂಟೆಬಿ ಎಂಬಾತನ ನೇತೃತ್ವದಲ್ಲಿದ್ದ 50 ಮಂದಿ ವೆಸ್ಟ್ ಸೈಡ್ ಬಾಯ್ಸ್ ತಂಡ.  ತಮ್ಮದು ಕೇವಲ  ಗಸ್ತು ಪಡೆ ಎಂದು ಮೇಜರ್ ಅಲನ್ ಮಾರ್ಷಲ್ ಹೇಳಿದರೂ ಕೇಳದೆ ಬಂದೂಕು ತೋರಿಸಿ ಬೆದರಿಸಿ ವಾಹನದಿಂದ ಕೆಳಗಿಳಿಸಿದರು. ಯೋಧರು ಬಂದೂಕು ಕೆಳಗಿಳಿಸುತ್ತಿದಂತೆಯೇ ಅವರಲ್ಲಿದ್ದ ಆಯುಧಗಳನ್ನು ಕಸಿದುಕೊಂಡು, ಎಲ್ಲರನ್ನು ವಶಪಡಿಸಿಕೊಂಡರು. ಜೊತೆಗಿದ್ದ ಲಿಫ್ಟಿನಂಟ್ ಮುಸ ಬಂಗುರಾನಿಗೆ ಕೂಡ  ಹಲ್ಲೆಮಾಡಿದರು. ಏಕೆಂದರೆ ಹಿಂದೆ ಈ ಮುಸ ಮತ್ತು ಕೆಲವು ವೆಸ್ಟ್ ಸೈಡ್ ಬಾಯ್ಸ್ ತಂಡದ ಸದಸ್ಯರು ಸೇನೆಯಲ್ಲಿ ಜೊತೆಗಿದ್ದರು. ಮುಸ ಸೇನೆಗೆ ನಿಷ್ಠನಾಗಿದ್ದರೆ, ಇವರುಗಳು ಬಂಡೆದ್ದು ಅರಣ್ಯದಾಚೆ ನೂಕಲ್ಪಟ್ಟಿದ್ದರು. ಈಗ ಪ್ರತಿಕಾರ ತೀರಿಸುವ ಸಮಯ ಒದಗಿತ್ತು. ಎಲ್ಲ 12 ಮಂದಿಯನ್ನು ದಟ್ಟ ಅಡವಿಯಲ್ಲಿದ್ದ ಗಬೇರಿ ಬಾನದತ್ತ  ಕರೆದೊಯ್ದರು. ಮೂಸಾನಿಗೆ ಅಮಾನುಷವಾಗಿ ಹಲ್ಲೆ ಮಾಡಿ ಗುಂಡಿಯೊಂದಕ್ಕೆ ಎಸೆದರು. ಉಳಿದವರನ್ನು ಪೋಡೇ ಕಲ್ಲೆಯ ಮನೆ ಸಮೀಪ  ಕೋಣೆಯೊಂದರಲ್ಲಿ ಕೂಡಿ ಹಾಕಿದರು .

ಉಗ್ರರ ನಾಯಕ ಪೋಡೇ ಕಲ್ಲೆ
ಈ ಸಂಗತಿ ಫ್ರೀಟೌನ್ ನಲ್ಲಿದ್ದ ಸೇನೆಯ ಕಮಾಂಡಿಂಗ್ ಆಫೀಸರ್ ಸೈಮನ್ ಫಾರ್ಡೆಮ್ ಗೆ ಮುಟ್ಟಿ, ಸಂಧಾನಕ್ಕೆ ಮುಂದಾದರು. ಈ 11 ಮಂದಿ ಐರಿಶ್ ಸೇನಾಪಡೆಯ ಯೋಧರು, ಅಪಹರಕಾರರಿಗೆ ಅಮೂಲ್ಯ ನಿಧಿಯಂತೆ ಕಂಡರು. ಅವರ ಬಿಡುಗಡೆ ಮಾಡಿದರೆ ತಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದೆಂದು ಯೋಚಿಸಿದರು. ಸೇನೆಯ ಅಧಿಕಾರಿಗಳು, ವಶದಲ್ಲಿರುವ  ಸೈನಿಕರನ್ನು ತಾವು ಖುದ್ದು ಕಂಡ ನಂತರವೇ ಸಂಧಾನ ಪ್ರಕ್ರಿಯೆ ಆರಂಭಿಸಲು ಸೂಚಿಸಿದರು. ಎರಡು ದಿನಗಳ ನಂತರ ಕಮಾಂಡಿಂಗ್ ಆಫೀಸರ್ ಸೈಮನ್ ಫಾರ್ಡೆಮ್ ಮತ್ತು ನಾಯಕ ಪೋಡೇ ಕಲ್ಲೆಯ ಭೇಟಿ ಆಯಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಅಲನ್ ಮಾರ್ಷಲ್ ಜೊತೆಗಿದ್ದ ಸಹಾಯಕ ಪ್ಲಾಹೆರ್ಟಿ, ತಮ್ಮನ್ನು ಬಂಧಿಸಿರಿಸಿದ ಸ್ಥಳದ ನಕಾಶೆಯನ್ನು ಹಸ್ತಲಾಘವದ ಸಮಯದಲ್ಲಿ ಸೈಮನ್ ಫಾರ್ಡೆಮ್ ಗೆ ನೀಡಿದ್ದರು. ಇದು ಮುಂದೆ ನೆರವಿಗೆ ಬಂತು. ವೆಸ್ಟ್ ಸೈಡ್ ಬಾಯ್ಸ್ಗಳ ಬೇಡಿಕೆ ವಿಲಕ್ಷಣವಾಗಿತ್ತು . ತಮ್ಮನ್ನು   ಒಂದು ರಾಜಕೀಯ ಸಂಘಟನೆಯಾಗಿ ಮಾನ್ಯ ಮಾಡಬೇಕು. ಜೈಲುಗಳಲ್ಲಿ ಬಂಧಿತರಾಗಿರುವ ತಮ್ಮ ಸಹವರ್ತಿಗಳನ್ನು ಬಿಡುಗಡೆ ಮಾಡಬೇಕು. ಲಂಡನ್ನಲ್ಲಿ ತಮ್ಮ ಸದಸ್ಯರೊಬ್ಬರಿಗೆ ಉಚಿತ ಶಿಕ್ಷಣ ನೀಡಬೇಕು. ಕೊನೆಯದು ಮಾತ್ರ ಆಶಾದಾಯಕವಾಗಿತ್ತು, 'ತಮಗೆ ಒಂದು ಸ್ಯಾಟಲೈಟ್ ಫೋನ್ ಮತ್ತು ಔಷಧ ಒದಗಿಸಿದರೆ ಐದು  ಜನ ಒತ್ತೆಯಾಳುಗಳನ್ನು ಬಿಡುಗಡೆ ಗೊಳಿಸುತ್ತೇವೆ' ಎಂದು ಹೇಳಿದರು. ಅಂತೆಯೇ ಸ್ಯಾಟೆಲೈಟ್ ಫೋನ್ ಒಂದನ್ನು ಒದಗಿಸಿ ಆಗಸ್ಟ್ 31ರಂದು ಐದು ಯೋಧರನ್ನು ಬಿಡುಗಡೆ ಮಾಡಿಸಲಾಯಿತು. ಇತ್ತ ಫೋನ್ ಪಡೆದುಕೊಂಡ ಸ್ವಯಂಘೋಷಿತ  ಬ್ರಿಗೇಡಿಯರ್ ಪೋಡೇ ಕಲ್ಲೆ ಅದರ ಮೂಲಕ ಬಿಬಿಸಿ (BBC)ವಾಹಿನಿಯನ್ನು ಸಂಪರ್ಕಿಸಿ ತಮ್ಮ ಬೇಡಿಕೆಗಳ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಯುವಂತೆ ಮಾಡಿದ್ದ. ಅಪಹರಣಕಾರರ ಸಂಯಮ ಕೆಡುವ ಮೊದಲೇ ಒಂದು ನಿರ್ಧಾರಕ್ಕೆ ಬರಲೇಬೇಕಿತ್ತು.

ಶತ್ರುಗಳ ವಶದಲ್ಲಿ ತಮ್ಮ ಸೇನೆಯ ಯೋಧರು ಬಂಧಿಯಾಗಿರುವುದು ಯಾವುದೇ ದೇಶಕ್ಕೂ ಸಹಿಸದ ವಿಷಯ. ಅದು ಕೂಡ ಸೂರ್ಯ ಮುಳುಗದ ಸಾಮ್ರಾಜ್ಯ ಗ್ರೇಟ್ ಬ್ರಿಟನ್ ಗೆ !!!

                                                                                                      -Tharanatha sona


www.nilume.net ನಲ್ಲಿ ಪ್ರಕಟವಾಗಿದ್ದ ಲೇಖನ